ರಿಪ್ಪನ್ ಪೇಟೆ :2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಭೀಕರ ದಾಳಿಯಲ್ಲಿ ನಮ್ಮ ದೇಶದ 40 ಸಿಆರ್ಪಿಎಫ್ ಯೋಧರು ಹುತಾತ್ಮರಾದರು . ಈ ದುರ್ಘಟನೆ ಇಡೀ ಭಾರತವನ್ನು ದುಃಖದ ಸಾಗರದಲ್ಲಿ ಮುಳುಗಿಸಿತು. ದೇಶದ ಭದ್ರತೆಗೆ ತಮ್ಮ ಪ್ರಾಣವನ್ನೇ ಅರ್ಪಿಸಿದ ಆ ವೀರ ಯೋಧರ ತ್ಯಾಗ ಸದಾ ನಮ್ಮ ಹೃದಯಗಳಲ್ಲಿ ಅಮರವಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಮಂಜುನಾಥ ಆಚಾರ್ ಹೇಳಿದರು.
ಪಟ್ಟಣದ ವಿನಾಯಕವೃತ್ತದಲ್ಲಿ ಹುತಾತ್ಮ ಯೋಧರ ಸ್ಮರಣೆಯನ್ನು ಮಾಡಿ ಪುಷ್ಪಾರ್ಚನೆ ಮಾಡುವಂತಹ ಕಾರ್ಯಕ್ರಮ ಹಿಂದೂ ಜಾಗರಣ ವೇದಿಕೆ ವಿನಾಯಕಪೇಟೆ ಘಟಕದ ವತಿಯಿಂದ ಏರ್ಪಡಿಸಲಾಗಿತ್ತು.
ಸೈನಿಕರು ಕರ್ತವ್ಯನಿಷ್ಠೆ, ದೇಶಭಕ್ತಿ ಮತ್ತು ಧೈರ್ಯದ ಪ್ರತೀಕ ಅವರು, “ರಾಷ್ಟ್ರ ಮೊದಲು ” ಎಂಬ ಸಂದೇಶವನ್ನು ತಮ್ಮ ಬಲಿದಾನದ ಮೂಲಕ ಲೋಕಕ್ಕೆ ತೋರಿಸಿದರು. ಅವರ ಕುಟುಂಬಗಳು ಅನುಭವಿಸಿದ ನೋವು ಅಪಾರವಾದದ್ದು; ಆದರೆ ಅವರ ತ್ಯಾಗವು ಕೋಟ್ಯಾಂತರ ಭಾರತೀಯರ ಮನಗಳಲ್ಲಿ ದೇಶಪ್ರೇಮವನ್ನು ಮತ್ತಷ್ಟು ಬಲಪಡಿಸಿತು ಎಂದು ನಾಗರತ್ನ ದೇವರಾಜ್ ಹೇಳಿದರು.
ಪುಲ್ವಾಮಾ ದಾಳಿಯ ಹುತಾತ್ಮರ ಸ್ಮರಣೆ ಎಂದರೆ ಕೇವಲ ಒಂದು ದಿನದ ಆಚರಣೆ ಅಲ್ಲ; ಅದು ದೇಶದ ಸುರಕ್ಷತೆಗಾಗಿ ನಾವೆಲ್ಲರೂ ಜಾಗೃತರಾಗಿರಬೇಕೆಂಬ ಸಂಕಲ್ಪದ ದಿನ. ಆ ವೀರರಿಗೆ ನಮ್ಮ ನಮನಗಳು. ಅವರ ಆತ್ಮಗಳಿಗೆ ಶಾಂತಿ ಸಿಗಲಿ, ಅವರ ತ್ಯಾಗವು ಸದಾ ನಮ್ಮ ದೇಶಕ್ಕೆ ದಾರಿ ದೀಪವಾಗಿರಲಿ ಎಂದು ನಿವೃತ್ತ ಸೈನಿಕರಾದ ರಾಘವೇಂದ್ರ ಆಚಾರ್ಯ ಅಭಿಪ್ರಾಯಿಸಿದರು.
ಹಿಂದೂ ಜಾಗರಣ ವೇದಿಕೆಯ ಕುಷನ್ ದೇವರಾಜ್, ಸಂಜಯ್, ಶ್ರೀನಿವಾಸ್ ಆಚಾರ್, ರಾಘವೇಂದ್ರ, ಆಟೋ ಪ್ರಕಾಶ್, ಮೂಗುಡ್ತಿ ಅರುಣ್, ಅಭಿಷೇಕ್, ಆರ್ ರಾಘವೇಂದ್ರ. ತ. ಮ ನರಸಿಂಹ, ಹೊನ್ನಾಳಿ ರವಿ, ಆಟೋ ಸಂತೋಷ್, ಮಹಿಳಾ ಮುಖಂಡರಾದ ಪದ್ಮ ಸುರೇಶ, ಶೈಲಾ ಪ್ರಭು, ಲಕ್ಷ್ಮಿ ಶ್ರೀನಿವಾಸ್ ಮತ್ತು ಅನೇಕರು ಹಾಜರಿದ್ದರು.















Leave a Reply