ವರದಿ :ಎನ್. ಕಾರ್ತಿಕ್ ಕೌಂಡಿನ್ಯ
ಹೊಸನಗರ (ನಗರ): ಇಂದಿನ ಕಾಲಘಟ್ಟದಲ್ಲಿ ಯುವಕರು ಕೃಷಿಯಿಂದ ದೂರ ಸರಿಯುತ್ತಿರುವ ದಿನಗಳಲ್ಲಿ, ಬಿದನೂರಿನ ಬೈಸೆ ಗ್ರಾಮದ ಶ್ರೀಧರಪುರ ನಿವಾಸಿ 26 ವರ್ಷದ ಯುವಕ ಸಾಮ್ರಾಜ್ಯ ಶೆಟ್ಟಿ ಅವರು ಪಾರಂಪರಿಕ ಕೃಷಿಯನ್ನೇ ತಮ್ಮ ಬದುಕಿನ ಮಾರ್ಗವನ್ನಾಗಿ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ.
ಕೃಷಿ ಕುಟುಂಬದಲ್ಲಿ ಜನಿಸಿದ ಸಾಮ್ರಾಜ್ಯ ಅವರು ಶುಂಠಿ, ಅಡಿಕೆ, ಬೆಳೆಯುತ್ತಿದ್ದು ಮತ್ತು ಅಡಿಕೆ ತೋಟದಲ್ಲಿ ಕಳೆ ಯಂತ್ರ ಸೇವೆಯನ್ನು ತಮ್ಮ ತಂಡದ ಮೂಲಕ ನಿರ್ವಹಣೆ ಮಾಡುತ್ತಿದ್ದಾರೆ. ಕಬ್ಬು ಬೆಳೆಗಾರಿಕೆಯನ್ನು ಅಜ್ಜನ ಕಾಲದಿಂದಲೇ ಬಂದದ್ದು. ಲಾಭ–ನಷ್ಟ ಲೆಕ್ಕಿಸದೆ ಕೃಷಿಯನ್ನು ಮುಂದುವರಿಸಬೇಕು ಎಂಬ ತಂದೆಯವರಾದ ಕುಶಾಲ್ ಶೆಟ್ಟಿ ಅವರ ಆಶಯದಂತೆ ಅವರು ಕಬ್ಬು ಬೆಳೆಗಾರಿಕೆಯನ್ನು ನಿಷ್ಠೆಯಿಂದ ಮುಂದುವರಿಸುತ್ತಿದ್ದಾರೆ. ಪ್ರತಿ ವರ್ಷವೂ ಏರಿಳಿತಗಳನ್ನು ಕಂಡರೂ, ತಮ್ಮ ಪಾರಂಪರಿಕ ಆಲೆಮನೆ ಪದ್ಧತಿಯನ್ನು ಕೈಬಿಡದೆ ಶ್ರಮಿಸುತ್ತಿದ್ದಾರೆ.
ಬಿದನೂರಿನ ದೇವಗಂಗೆಯ ಬಳಿ ಚಿಕ್ಕಪ್ಪನ ಜೊತೆಗೂಡಿ ಆಲೆಮನೆ ನಡೆಸುತ್ತಿರುವ ಸಾಮ್ರಾಜ್ಯ, ನೈಸರ್ಗಿಕ ವಿಧಾನದಲ್ಲಿ ತಯಾರಾಗುವ ಸುಪ್ರಸಿದ್ಧ ‘ದೇವಗಂಗೆ ಬೆಲ್ಲ’ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಈ ಭಾಗದ ಬೆಲ್ಲವು ತನ್ನ ವಿಶಿಷ್ಟ ರುಚಿ ಮತ್ತು ಗುಣಮಟ್ಟಕ್ಕಾಗಿ ಪ್ರಸಿದ್ಧಿ ಪಡೆದಿದ್ದು, ಸ್ಥಳೀಯವಾಗಿಯೇ ಅಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಬೇಡಿಕೆ ಹೊಂದಿದೆ. ಪಾರಂಪರಿಕ ವಿಧಾನದಲ್ಲಿ ತಯಾರಾಗುವ ದೇವಗಂಗೆ ಬೆಲ್ಲವು ಈ ಭಾಗದ ಗುರುತಾಗಿಯೇ ಉಳಿದಿದೆ.

ಈ ವರ್ಷ 16 ಕ್ಯಾನ್ ಬೆಲ್ಲ ಉತ್ಪಾದನೆ ಆಗಬೇಕಿದ್ದ ಜಾಗದಲ್ಲಿ ಕೇವಲ 8 ಕ್ಯಾನ್ ಮಾತ್ರ ಲಭ್ಯವಾಗಿದೆ. ಇಳುವರಿ ಕಡಿಮೆಯಾದರೂ ಮನೋಬಲ ಕಳೆದುಕೊಳ್ಳದೆ, ಮುಂದಿನ ಬಾರಿಯೂ ಕಬ್ಬು ನೆಟ್ಟು ದೇವಗಂಗೆ ಬೆಲ್ಲದ ಪರಂಪರೆಯನ್ನು ಉಳಿಸುವ ಸಂಕಲ್ಪದಿಂದ ಸಾಮ್ರಾಜ್ಯ ಮುಂದಾಗಿದ್ದಾರೆ.

ಸಾವಯವ ಪದ್ಧತಿಯಲ್ಲಿ ಆಲೆಮನೆ ನಡೆಸುತ್ತಿರುವ ಸಾಮ್ರಾಜ್ಯ ಶೆಟ್ಟಿ ಅವರು ತಾವು ಉತ್ಪಾದಿಸುವ ಬೆಲ್ಲವನ್ನು ಮೊದಲು ಮನೆಯ ಬಳಕೆಗೆ ಬೇಕಾದಷ್ಟು ಉಳಿಸಿಕೊಂಡು, ಉಳಿದ ಪ್ರಮಾಣವನ್ನು ಮಾತ್ರ ಮಾರಾಟ ಮಾಡುತ್ತಾರೆ. ಅವರ ಮಾತಿನಂತೆ, “ನಾವೇ ಬೆಳೆಸಿದ ಕಬ್ಬಿನಿಂದ ತಯಾರಿಸಿದ ಬೆಲ್ಲವನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಲಾಭಕರ. ಅದರ ಸ್ವಾಭಾವಿಕ ರುಚಿ ಮತ್ತು ಶುದ್ಧತೆಯೇ ನಮ್ಮ ದೊಡ್ಡ ಸಂಪತ್ತು” ಎಂದು ಹೇಳುತ್ತಾರೆ.

‘ ಕಬ್ಬಿನಂತಹ ಕಷ್ಟ ಇಲ್ಲ – ಬೆಲ್ಲದಂತ ಸಿಹಿ ಇಲ್ಲ ‘ ಕಬ್ಬು ಬೆಳೆಯುವುದು ಮಲೆನಾಡಿನ ಭಾಗದಲ್ಲಿ ಅತ್ಯಂತ ಕಷ್ಟಕರ ಕೃಷಿ ಆದರೆ ನಮ್ಮ ಮಲೆನಾಡಿನ ದೇವಗಂಗೆ ಬೆಲ್ಲದ ಪರಂಪರೆಯನ್ನು ಉಳಿಸುವುದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ವರ್ಷಕ್ಕೊಮ್ಮೆ ಆಲೆಮನೆ ನಡೆಯುವ ದಿನಗಳಲ್ಲಿ ಅನೇಕ ಸ್ನೇಹಿತರು ಮತ್ತು ಬಂಧುಗಳು ಭೇಟಿ ನೀಡುವುದು ಸಾಮಾನ್ಯ. ಆ ಸಮಯದಲ್ಲಿ ಕಬ್ಬಿನ ಹಾಲು, ತಾಜಾ ಬೆಲ್ಲ ಸೇರಿದಂತೆ ವಿವಿಧ ಸವಿಯುವ ಪದಾರ್ಥಗಳನ್ನು ಎಲ್ಲರೂ ಆಸ್ವಾದಿಸುತ್ತಾರೆ. “ಆಲೆಮನೆ ಅಂದರೆ ನಮ್ಮಿಗೆ ಕೆಲಸ ಮಾತ್ರವಲ್ಲ, ಒಂದು ಹಬ್ಬದ ವಾತಾವರಣ. ಸ್ನೇಹಿತರು ಬಂದು ಕಬ್ಬಿನ ಹಾಲು, ಬೆಲ್ಲ ಸವಿಯುವಾಗ ಸಿಗುವ ಸಂತೋಷವೇ ನಮಗೆ ದೊಡ್ಡ ಸಂಪಾದನೆ,” ಎಂದು ಸಾಮ್ರಾಜ್ಯ ಶೆಟ್ಟಿ ಸಂತೋಷದಿಂದ ಹೇಳುತ್ತಾರೆ.
ಆಲೆಮನೆ ನಡೆಸುವುದರಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವಂತಹ ಅಂಡಗದೋದೂರಿನ ಹಾಲಪ್ಪ ಗೌಡ್ರು ಮತ್ತು ಬಾಬಣ್ಣ,ರಾಜಣ್ಣ,ಬಸವಣ್ಣ,ಯೋಗೇಶ್ ಭಟ್ರು,ಮಂಜಣ್ಣ,ಚಂದ್ರ ನಾಯ್ಕ, ಚಿಕ್ಕಪ್ಪ ಉದಯ ಶೆಟ್ಟಿ, ನಾಗರಾಜ್ ಶೆಟ್ಟಿ, ಸುದರ್ಶನ್,ನೂತನ್, ನೇಮಿರಾಜ್ ಇವೆರೆಲ್ಲ ಆಲೆಮನೆಯಲ್ಲಿ ಸಹಕಾರಿಗಳಾಗಿ ಜೊತೆಗಿದ್ದರು.
“ಲಾಭ–ನಷ್ಟಗಳು ಕೃಷಿಯ ಭಾಗವೇ. ಆದರೆ ನಮ್ಮ ಹಿರಿಯರು ಕಟ್ಟಿದ ಪಾರಂಪರಿಕ ಆಲೆಮನೆ ಮತ್ತು ದೇವಗಂಗೆ ಬೆಲ್ಲದ ಹೆಗ್ಗಳಿಕೆಯನ್ನು ಉಳಿಸುವುದು ನಮ್ಮ ಜವಾಬ್ದಾರಿ,” – ಎಂಬ ನಿಲುವಿನಿಂದ ಸಾಗುತ್ತಿರುವ ಸಾಮ್ರಾಜ್ಯ ಶೆಟ್ಟಿ ನಿಜಕ್ಕೂ ಒಬ್ಬ ‘ಸಾಹಸಿ’ ಕೃಷಿಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಾಮ್ರಾಜ್ಯ ಶೆಟ್ಟಿ – 7676724530
“ನಮ್ಮ ಕೈಯಿಂದ ಬೆಳೆದ ಕಬ್ಬು, ನಮ್ಮ ಆಲೆಮನೆಯಲ್ಲಿ ಮೂಡುವ ದೇವಗಂಗೆ ಬೆಲ್ಲ – ಇದೇ ನಮ್ಮ ಕುಟುಂಬದ ಗೌರವ. ಲಾಭಕ್ಕಾಗಿ ಅಲ್ಲ, ಪರಂಪರೆಯನ್ನು ಉಳಿಸಲು ನಾನು ಕೃಷಿ ಮಾಡುತ್ತಿದ್ದೇನೆ.” – ಸಾಮ್ರಾಜ್ಯ ಶೆಟ್ಟಿ,ಶ್ರೀಧರಪುರ,ಯುವ ರೈತ
“ ದೇವಗಂಗೆ ಬೆಲ್ಲದ ಪರಂಪರೆಯನ್ನು ಕೇಳಿ ನನಗೂ ಕಬ್ಬು ಬೆಳೆಸಬೇಕೆಂಬ ಆಸೆ ಮೂಡಿದೆ. ಮುಂದಿನ ದಿನದಲ್ಲಿ ನಾನು ಕೂಡ ಕಬ್ಬಿನ ಕೃಷಿ ಆರಂಭಿಸುವ ಆಲೋಚನೆಯಲ್ಲಿದ್ದೇನೆ.” – ಸುದರ್ಶನ್, ಸ್ನೇಹಿತ















Leave a Reply