ನಗರ : ಹಿಂದೂ ಸಾಮ್ರಾಜ್ಯದ ರಕ್ಷಣೆಗಾಗಿ ತನ್ನ ಮುಂದಿನ ಪೀಳಿಗೆಯನ್ನು ರಕ್ಷಿಸುವ ಹೋರಾಟದಲ್ಲಿದ್ದ ಹಿಂದವೀ ಸ್ವರಾಜ್ಯದ ಕುಡಿ ರಾಜಾರಾಮನ ರಕ್ಷಣೆಗೆ ನಿಂತ ಕೆಳದಿಯ ಚೆನ್ನಮ್ಮ, ಔರಂಗಜೇಬನ ಸೈನ್ಯಕ್ಕೆ ಬೆದರದೆ ಬಿದನೂರಿನ ಭೂಮಿಯನ್ನು ಕ್ಷಾತ್ರ ಪರಂಪರೆಯ ಕೇಂದ್ರ ಸ್ಥಾನವನ್ನಾಗಿಸಿಕೊಂಡ ಶೌರ್ಯ ಭೂಮಿ ಇದು, ಇಲ್ಲಿ ಕ್ಷಾತ್ರಪರಂಪರೆಯು ರಕ್ತಗತವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನವೀನ್ ಸುಬ್ರಮಣ್ಯ ದಿಕ್ಸೂಚಿ ಭಾಷಣದಲ್ಲಿ ಹೇಳಿದರು.

ನಗರ, ಕರಿಮನೆ,ಅಂಡಗದೋದೂರು ಮೂರು ಮಂಡಲಗಳು ಸೇರಿಸಿ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮವು ಭಾನುವಾರ,ನಗರದ ಬಸ್ ನಿಲ್ದಾಣದ ಸಮೀಪದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ನೆಲದ ಮೇಲಿರುವಂತಹ ಗೌರವ, ನಮ್ಮ ಜೀವನ ಶೈಲಿ ನಮ್ಮ ಸಂಸ್ಕೃತಿ ಇದೆಲ್ಲದರ ಪ್ರತಿನಿಧಿಗಳು ನಾವು ಈ ಪರಂಪರೆಯ ಸಂರಕ್ಷಣೆಯ ಸಂಪೂರ್ಣ ಹೊಣೆಗಾರಿಕೆ ಈಡೀ ಹಿಂದೂ ಸಮಾಜದ್ದಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರಂಭದ ದಿನಗಳಲ್ಲೇ ಡಾಕ್ಟರ್ ಕೇಶವ ಬಲಿರಾಮ ಹೆಡಗೇವಾರ್ ಅವರು ನಾವು ಯಾವುದೇ ಹೊಸ ಸಿದ್ಧಾಂತ, ಹೊಸ ತತ್ವ, ಹೊಸ ವಿಚಾರವನ್ನು ಸಮಾಜದ ಮುಂದಿಟ್ಟು ಸಂಘಟಿಸಲು ಹೊರಟಿಲ್ಲ ನಮ್ಮ ಪ್ರಾಚೀನ ಭಾರತದ ಸಿದ್ಧಾಂತವನ್ನೇ, ಸನಾತನ ಧರ್ಮದ ತತ್ವ, ವಿಚಾರಗಳನ್ನೇ ಜೋಡಿಸಿಕೊಂಡು ಈಡೀ ಹಿಂದೂ ಸಮಾಜವನ್ನು ಸಂಘಟಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.
ಕೇಸರಿ ಧ್ವಜ, ಭಾರತ ಮಾತೆ , ಓಂಕಾರಗಳು ಇದೆಲ್ಲವೂ ಈ ರಾಷ್ಟ್ರವನ್ನ ಪ್ರತಿನಿಧಿಸುವಂತಹ ನಮ್ಮ ಸಾಂಸ್ಕೃತಿಕ, ಸಂಸ್ಕೃತಿಯನ್ನು ವೈಭವಿಕರಿಸುವಂತಹ ಗುರುತಾಗಿದೆ.ನಮ್ಮ ನೆಲ, ಸಂಸ್ಕೃತಿಯು ನಮ್ಮ ಪೂರ್ವಜರನ್ನು ಪ್ರತಿನಿಧಿಸುವಂತಹ ಸಂಕೇತಗಳು ಎಂದು ಕೆಲವರು ಮರೆತಿರಬಹುದು ಅದನ್ನು ಜಾಗೃತಿಗೊಳಿಸುವಂತಹ ಕಾರ್ಯಕ್ಕೆ ನಾವೆಲ್ಲ ಮುಂದಾಗಬೇಕು ಎಂದರು.

ಸನಾತನ ಧರ್ಮದ ಸಾರವನ್ನು ಜಗತ್ತಿಗೆ ಸಾರಿದಂತಹ ಸ್ವಾಮಿ ವಿವೇಕಾನಂದರ ಸಾಹಿತ್ಯವನ್ನು ರಚಿಸಿದ ಕುವೆಂಪು ಅವರು ತಮ್ಮ ಸಾಹಿತ್ಯವನ್ನು ಓದಿದಂತಹ ತರುಣ – ತರುಣಿಯರು ಮಲೆನಾಡಿನ ಮಣ್ಣಿನಲ್ಲಿ ಸಿಡಿಲಮರಿ ಜನಿಸಬೇಕೆಂದು ತಮ್ಮ ಸಾಹಿತ್ಯದಲ್ಲಿ ಉಲ್ಲೇಖಿಸಿದ್ದನ್ನು ಮಂಡಿಸಿದರು.
ಹಿಂದೂ ಸಮಾಜ ಸಾಮರಸ್ಯದಿಂದ ಬದುಕಲೇಬೇಕು ಇಲ್ಲವಾದರೆ ದುಷ್ಟ ದುರುಳಶಕ್ತಿಗಳ ಅಟ್ಟಹಾಸ ಹೆಚ್ಚಾಗಲಿದೆ. ಒಂದು ಕಾಲಘಟ್ಟದಲ್ಲಿ ಒಂದು ಜಾತಿಯಿಂದ ಇನ್ನೊಂದು ಜಾತಿಯ ವ್ಯಕ್ತಿಗೆ ಇಷ್ಟು ಅಡಿ ಅಂತರ ಎಂಬಂತಹ ಕಾಲವಿತ್ತು ಅಂತಹ ಕಾಲದಲ್ಲಿ ಸಮಾಜವನ್ನು ಕಟ್ಟುವುದಕ್ಕಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಮತ,ಒಂದೇ ದೇವರು ಎಂದು ಪ್ರತಿಪಾದಿಸಿ ಅನಿಷ್ಠ ಪದ್ದತಿಯನ್ನು ದೂರಗೊಳಿಸಿ ಸಮಾಜ ಸುಧಾರಣೆಗೆ ಪ್ರಯತ್ನಿಸಿದ್ದರು. ತಾವು ಕಂಡಂತಹ ಶಿವನನ್ನು ಪ್ರತಿಷ್ಠಾಪಿಸಿ ಆರಾಧನೆಯನ್ನು ಮಾಡಿ ಸಾಮರಸ್ಯದ ಸಂದೇಶವನ್ನು ಸಾರಿದರು.
ಈ ನೆಲದ ಯಾವ ತತ್ವಶಾಸ್ತ್ರವು ಮತ್ತು ವೈಚಾರಿಕತೆಯು, ಸಂಸ್ಕೃತಿಯು ಹುಟ್ಟಿನಿಂದ ಶ್ರೇಷ್ಠ – ಕನಿಷ್ಠ ಎಂದು ಎಲ್ಲಿಯೂ ಯಾವ ಶಾಸ್ತ್ರದಲ್ಲಿಯೂ ಕೂಡ ಹೇಳಿಲ್ಲ ಮತ್ತು ಅದನ್ನು ಒಪ್ಪುವುದು ಇಲ್ಲ ಅದುವೇ ಸತ್ಯ.
ಭಾರತದ ಶಾಸ್ತ್ರಗಳು ಅಣು ಅಣುವಿನಲ್ಲೂ, ಕಣಕಣದಲ್ಲೂ ಬ್ರಹ್ಮನಿದ್ದಾನೆ ಎಂದು ಹೇಳಿದೆ. ಅಹಂ ಬ್ರಹ್ಮಾಸ್ಮಿ ನನ್ನೊಳಗೂ ಬ್ರಹ್ಮನಿದ್ದಾನೆ, ನಿನ್ನೊಳಗೂ ಬ್ರಹ್ಮನಿದ್ದಾನೆ. ಮನುಷ್ಯನ ಪ್ರಯಾಣ ಪರಿಪೂರ್ಣದ ಕಡೆಗೆ ಎಂದು ಹೇಳಿದೆಯೇ ಹೊರತು ಹುಟ್ಟಿನಿಂದ ಯಾವುದೇ ಜಾತಿ ಶ್ರೇಷ್ಠ ಎನ್ನುವುದು ಎಲ್ಲಿಯೂ ಹೇಳಿಲ್ಲ.ಅಯೋಧ್ಯ ರಾಮಮಂದಿರ ನಿರ್ಮಾಣದ ಸಮಯದಲ್ಲಿ ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂದು ಕೂಗಿದಂತಹ ಘೋಷಣೆಗಳು ಘೋಷಣೆಗಳಾಗಿ ಉಳಿಯದೆ ಹಿಂದೂ ಭಾವ ನಮ್ಮಲ್ಲಿ ಜಾಗೃತಗೊಳಿಸಬೇಕು. ‘ ಹಿಂದವ ಸೋದರ ಸರ್ವೇ ‘ ಸತ್ಯವಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶೋಭಾಯಾತ್ರೆ: ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಬಸ್ನಿಲ್ದಾಣದ ತನಕ ಶೋಭಾಯಾತ್ರೆ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಚಂಡೆ, ಭಜನಾ ಕುಣಿತ, ವಿವಿಧ ರಾಷ್ಟ್ರ ಪುರುಷರ ವೇಷ ತೊಟ್ಟ ಪುಟಾಣಿಗಳು ಗಮನ ಸೆಳೆದರು.
ಸನ್ಮಾನ: ಪೌರಕಾರ್ಮಿಕ ರವಿ, ಚೀಕಳಿ ಹರೀಶ್, ವೆಂಕಟೇಶ ಭಂಡಾರಿ,ನಾರಾಯಣ ಅರೋಡಿ, ಆಟೋ ನಾಗರಾಜ್, ವಿಶ್ವನಾಥ ಎಂ,ಪ್ರಭಾಕರ ಶೆಟ್ಟಿ, ಸೇರಿದಂತೆ ವಿವಿಧ ವೃತ್ತಿಪರ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಆರೆಸ್ಸೆಸ್ ತಾಲೂಕು ಸೇವಾ ಪ್ರಮುಖ್ ನೇಮಿರಾಜ್ ಪ್ರಾಸ್ತಾವಿಕ ನುಡಿದರು.ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷ ವಿನಯ್ ವಿ.ಎಂ ಹೆಗ್ಗೆರೆ ಅವರು ಮಾತನಾಡಿದರು.
ಹಿಂದೂ ಸಂಗಮ ನಿರ್ವಹಣಾ ಸಮಿತಿಯ ನಾರಾಯಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಂಡಗದೋದೂರು ಸೀತಮ್ಮ, ಪ್ರೇಮಾ ಶ್ರೀಧರ್ ಉಪಸ್ಥಿತರಿದ್ದರು.
ಆರೆಸ್ಸೆಸ್ ಹೋಬಳಿ ಸಹ ಪ್ರಮುಖ್ ಸಾಮ್ರಾಜ್ ಶ್ರೀಧರಪುರ ನಿರೂಪಿಸಿದರು ,ಎನ್. ವೈ ಸುರೇಶ್ ವಂದಿಸಿದರು. ವಡ್ಡಿನಬೈಲು ಸುಬ್ರಮಣ್ಯ, ಸುಬ್ರಹ್ಮಣ್ಯ ಭಾಗವತ್, ವಸುಧಾ ಚೈತನ್ಯ, ರಾಜೇಶ್, ಸುದರ್ಶನ, ಚೈತನ್ಯ ನಿಟ್ಟೂರು,ನಿತಿನ್,ಶಿವರಾಮ, ಅಭಿಲಾಷ ಮತ್ತು ಅನೇಕರು ಉಪಸ್ಥಿತರಿದ್ದರು.

ಈ ನೆಲದ ಯಾವ ತತ್ವಶಾಸ್ತ್ರ, ವೈಚಾರಿಕತೆ,ಸಂಸ್ಕೃತಿಯು ಹುಟ್ಟಿನಿಂದ ಶ್ರೇಷ್ಠ – ಕನಿಷ್ಠ ಎಂದು ಎಲ್ಲಿಯೂ ಯಾವ ಶಾಸ್ತ್ರದಲ್ಲಿಯೂ ಕೂಡ ಹೇಳಿಲ್ಲ ಮತ್ತು ನಮ್ಮ ಸಂಸ್ಕೃತಿ ಅದನ್ನು ಒಪ್ಪುವುದು ಇಲ್ಲ. ಬಸವಣ್ಣ,ಬ್ರಹ್ಮಶ್ರೀ ನಾರಾಯಣ ಗುರುಗಳು, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ನಮ್ಮ ಪರಂಪರೆಯನ್ನು ರಕ್ಷಿಸೋಣ.
– ನವೀನ್ ಸುಬ್ರಮಣ್ಯ, ಸಾಮಾಜಿಕ ಕಾರ್ಯಕರ್ತ








Leave a Reply