ರಿಪ್ಪನ್ಪೇಟೆ: ಆಕಸ್ಮಿಕ ವಿದ್ಯುತ್ ಅವಘಡದಲ್ಲಿ ಯುವ ಕಾರ್ಮಿಕನೊಬ್ಬ ಪ್ರಾಣ ಕಳೆದುಕೊಂಡ ಘಟನೆಯ ನಂತರ ಆತನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯ ಜೀವ ವಿಮೆ ಮಹತ್ವದ ರಕ್ಷಾಕವಚವಾಗಿ ಸ್ಪಂದಿಸಿದೆ. ಗೋಣಿಕೆರೆ ಕೇಶವ ಅವರ ಕುಟುಂಬಕ್ಕೆ ಮಂಗಳವಾರ ₹10 ಲಕ್ಷ ಮೊತ್ತದ ಅಂಚೆ ಜೀವ ವಿಮಾ ಚೆಕ್ ವಿತರಿಸಲಾಯಿತು.
ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಮೊಗ್ಗ ವಿಭಾಗೀಯ ಅಂಚೆ ಅಧೀಕ್ಷಕ ಕುಮಾರಸ್ವಾಮಿ ಅವರು ಮೃತನ ಕುಟುಂಬಸ್ಥರಿಗೆ ಚೆಕ್ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಅವರು, ವಿದ್ಯುತ್ ಗುತ್ತಿಗೆದಾರನ ಬಳಿ ಕಾರ್ಮಿಕನಾಗಿ ದುಡಿಯುತ್ತಿದ್ದ ಯುವಕ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು, ಇದ್ದೊಬ್ಬ ಮಗನನ್ನು ಕಳೆದುಕೊಂಡ ಕುಟುಂಬ ಭವಿಷ್ಯದ ಚಿಂತೆಯಲ್ಲಿ ಮುಳುಗಿತ್ತು ಎಂದು ತಿಳಿಸಿದರು. ಕಾರ್ಮಿಕನ ಹೆಸರಿನಲ್ಲಿ ಗುತ್ತಿಗೆದಾರ ದೇವರಾಜ ಅವರು ಮುಂಚಿತವಾಗಿಯೇ ಅಂಚೆ ಜೀವ ವಿಮೆ ಮಾಡಿಸಿದ್ದ ಪರಿಣಾಮ, ಇಂದು ಈ ಕುಟುಂಬಕ್ಕೆ ಆರ್ಥಿಕ ಭದ್ರತೆ ದೊರಕಿದೆ.
ಅಂಚೆ ಇಲಾಖೆಯು ಜನಸಾಮಾನ್ಯರಿಗಾಗಿ ಆರೋಗ್ಯ, ಅಪಘಾತ ಮತ್ತು ಜೀವ ವಿಮಾ ಯೋಜನೆಗಳನ್ನು ಕಡಿಮೆ ಕಂತುಗಳಲ್ಲಿ ಒದಗಿಸುತ್ತಿದ್ದು, ಅಕಾಲಿಕ ಅನಾಹುತಗಳ ವೇಳೆ ಇವು ಕುಟುಂಬಕ್ಕೆ ಬೆಂಬಲವಾಗುತ್ತವೆ ಎಂದು ಅವರು ಹೇಳಿದರು.ಜನರು ವಾಹನಗಳ ವಿಮೆಗೆ ಮಹತ್ವ ನೀಡುವಂತೆ ತಮ್ಮ ಅಮೂಲ್ಯ ಜೀವಕ್ಕೂ ವಿಮೆ ಮಾಡಿಸಬೇಕು. ಏಕಾಏಕಿ ಸಂಭವಿಸುವ ಅಪಘಾತಗಳು ಬದುಕಿನ ದಿಕ್ಕು ಬದಲಾಯಿಸಬಹುದು; ಅಂತಹ ಸಂದರ್ಭಗಳಲ್ಲಿ ವಿಮೆ ಕುಟುಂಬಕ್ಕೆ ಆಧಾರವಾಗುತ್ತದೆ. ಸಮೀಪದ ಅಂಚೆ ಕಚೇರಿಗಳಲ್ಲಿ ಈ ಕುರಿತು ಸಂಪೂರ್ಣ ಮಾಹಿತಿ ಲಭ್ಯವಿದೆ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಉಪ ಅಂಚೆ ಅಧೀಕ್ಷಕ ಧನಂಜಯ, ವ್ಯವಸ್ಥಾಪಕ ಜಿತೇಶ್, ಆಸಿಫ್,ಸತೀಶ್, ಲೋಕೇಶ್, ನಿರೂಪ್,ಅಮಿತ್, ಬಿಪಿ ರಾಮಚಂದ್ರ, ಮಳವಳ್ಳಿ ದೇವರಾಜ, ಸೇರಿದಂತೆ ಹಲವರು ಭಾಗವಹಿಸಿದ್ದರು.















Leave a Reply